Thursday 6 March 2014

ಇಸ್ರೇಲ್ - ಪ್ಯಾಲೆಸ್ಟೈನ್ ಕದನದ ಸಂಕ್ಷಿಪ್ತ ವಿವರ

ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ಗಳ ನಡುವೆ ವರ್ಷಾನುಗಟ್ಟಲೆಯಿಂದ ನಡೆಯುತ್ತಿರುವ ಯುದ್ಧ/ಕಾಳಗದ ಬಗ್ಗೆ ನೀವು ಆಗಾಗ್ಗೆ ದಿನಪತ್ರಿಕೆಗಳಲ್ಲಿ ಓದಿರುತ್ತೀರಿ, ಟೀ.ವಿ ಯಲ್ಲಿ ನೋಡಿರುತ್ತೀರಿ. ಈ ಕದನದ ಹಿನ್ನಲೆ ಏನು ಎಂದು ವಿವರಿಸುವ ಲೇಖನಮಾಲಿಕೆಗಳು, ಸಾಕ್ಷ್ಯಚಿತ್ರಗಳು ಬೇಕಾದಷ್ಟಿವೆ.  ಆದರೆ ಅವುಗಳಲ್ಲಿ ಹೆಚ್ಚಿನವನ್ನ ಅರ್ಥೈಸಿಕೊಳ್ಳಲು ಚರಿತ್ರೆಯ ಗಂಭೀರ ಅಧ್ಯಯನ ಹಾಗೂ ತಿಳುವಳಿಕೆಗಳ ಅಗತ್ಯತೆ ಕಂಡು ಬರುತ್ತದೆ. ಸಾಮಾನ್ಯರಿಗೂ ಅರ್ಥವಾಗುವಂತೆ, ಬರಿಯ ಐದು-ಹತ್ತು ನಿಮಿಷಗಳಲ್ಲಿ ಓದಿ ಮುಗಿಸಬಲ್ಲ ಸಂಕ್ಷಿಪ್ತ ಚಿತ್ರಣ ನೀಡುವಂತಹ ಲೇಖನವೊಂದನ್ನ ಬರೆಯಬೇಕೆಂಬುದು ನನ್ನ ಬಹು ದಿನಗಳ ಆಸೆಯಾಗಿತ್ತು. ಆದ್ದರಿಂದ ಈ ಚಿಕ್ಕ ಲೇಖನ.

ಇತಿಹಾಸ:

ಕ್ರಿಸ್ತ ಶಕ ಎಪ್ಪತ್ತರ ಆಸುಪಾಸಿನಲ್ಲಿ, ಯಹೂದ್ಯರೇ ಹೆಚ್ಚಾಗಿದ್ದ ಈ ಭೂಪ್ರದೇಶವನ್ನ ರೋಮನ್ನರು ಕಬಳಿಸಿದರು. ಆ ಬಳಿಕ ಅಲ್ಲಿಂದ ಕಾಲ್ಕಿತ್ತ ಯಹೂದ್ಯರಲ್ಲಿ ಹೆಚ್ಚಿನವರು ಯೂರೋಪಿನ ದೇಶಗಳಲ್ಲಿ ಅಲ್ಲಲ್ಲಿ ಚದುರಿದಂತೆ ನೆಲೆ ನಿಂತರು. 1453 ರಲ್ಲಿ ಒಟ್ಟೋಮನ್ ಸಾಮ್ರಾಜ್ಯದ ವಿರುದ್ಧ ರೋಮನ್ನರು ಸೋತ ಬಳಿಕ ಈ ಪ್ರಾಂತ್ಯದಲ್ಲಿ ಮುಸಲ್ಮಾನರ ಪ್ರಾಬಲ್ಯ ಹೆಚ್ಚಿತು. ಸುಮಾರು 450 ವರ್ಷಗಳ ಬಳಿಕ ನಡೆದ ಮೊದಲನೇ ಮಹಾಯುದ್ಧ ಮುಗಿಯುವುದರೊಂದಿಗೆ ಒಟ್ಟೋಮನ್ ಸಾಮ್ರಾಜ್ಯವೂ ಮುಳುಗಿದಾಗ ಈ ಪ್ರದೇಶಕ್ಕೆ ಬ್ರಿಟಿಷ್ ಪ್ಯಾಲೆಸ್ಟೈನ್ (British Mandate of Palestine) ಎಂದು ನಾಮಕರಣ ಮಾಡಲಾಯಿತು. ಈಗಿನ ಇಸ್ರೇಲ್, ಜೋರ್ಡನ್, ಸಿರಿಯಾ, ವೆಸ್ಟ್ ಬ್ಯಾಂಕ್ ಹಾಗೂ ಗಾಜಾ ಪಟ್ಟಿಗಳನ್ನೊಳಗೊಂಡ ಈ ವಿಶಾಲ ಪ್ರಾಂತ್ಯದಲ್ಲಿ ಆಗ ಅಂದಾಜು 85% ಮುಸಲ್ಮಾನರು, 10% ಕ್ರಿಶ್ಚಿಯನ್ನರು ಹಾಗೂ 5% ಯಹೂದ್ಯರು ವಾಸವಾಗಿದ್ದರು. ಇದೇ ಸಮಯದಲ್ಲಿ ತಮ್ಮದೇ ಆದ ಒಂದು ರಾಷ್ಟ್ರ ಬೇಕೆಂಬ ಯಹೂದ್ಯರ ಚಳುವಳಿ ಯುರೋಪಿನಲ್ಲಿ ಅಲ್ಲಲ್ಲಿ ಆರಂಭವಾಗಿತ್ತು. ಯಹೂದ್ಯರ ಈ ಚಳುವಳಿಗೆ (Zionism) ಕ್ರಿಶ್ಚಿಯನ್ನರ ಬೆಂಬಲ ಕೂಡ ಇತ್ತು.

ಯಹೂದೀ ಚಳುವಳಿಯ ಹರಿಕಾರ ಥಿಯೋಡೋರ್ ಹರ್ತ್ಸೆಲ್ 
ಆಫ್ರಿಕಾ, ಅಮೇರಿಕಾ ಭೂಖಂಡಗಳಿಗಿಂತ, ಒಂದಾನೊಂದು ಕಾಲದಲ್ಲಿ ತಮ್ಮ ಆಳ್ವಿಕೆಯಲ್ಲಿದ್ದ ಪ್ಯಾಲೆಸ್ಟೈನ್ ಭೂಮಿಯೇ ಹೊಸ ರಾಷ್ಟ್ರ ನಿರ್ಮಾಣಕ್ಕೆ ಪ್ರಶಸ್ತವಾದ ಸ್ಥಳ ಎಂಬ ನಂಬಿಕೆಯೊಂದಿಗೆ ಸಾವಿರಾರು ಯಹೂದ್ಯರು ಪ್ಯಾಲೆಸ್ಟೈನ್ ಗೆ ವಲಸೆ ಬರಲಾರಂಭಿಸಿದರು. ಇದೇ ಸಮಯದಲ್ಲಿ ಹಿಟ್ಲರ್ ಕೂಡ ಯಹೂದ್ಯರ ನಿರ್ನಾಮಕ್ಕೆ ಹೊರಟಿದ್ದನಾದ್ದರಿಂದ, ಯೂರೋಪಿನ ಯಹೂದೀ ವಲಸೆಗಾರರ ಸಂಖ್ಯೆ ದಿನೇ ದಿನೇ ಹೆಚ್ಚತೊಡಗಿತು. ಸ್ವಾಭಾವಿಕವಾಗಿಯೇ ಪ್ಯಾಲೆಸ್ಟೈನಿನ ಬಹುಸಂಖ್ಯಾತ ಮುಸಲ್ಮಾನರು ಇದರಿಂದ ಕ್ರುದ್ಧರಾದರು. ಜನಾಂಗೀಯ ಗಲಭೆಗಳು ಆರಂಭವಾದವು. 

1947ರ ವಿಭಜನೆ:

ಎರಡನೇ ಮಹಾಯುದ್ಧದ ಬಳಿಕ ರಚನೆಯಾದ ವಿಶ್ವಸಂಸ್ಥೆ ಪ್ರಭಾವೀ ಯಹೂದ್ಯರ ಒತ್ತಡಕ್ಕೆ ಮಣಿದು ಪ್ಯಾಲೆಸ್ಟೈನನ್ನ ವಿಭಜಿಸಲು ಒಪ್ಪಿಗೆ ನೀಡಿತು. ವಿಭಜನೆಗೂ ಮೊದಲು ಆ ಪ್ರದೇಶದ ಕೇವಲ 7% ಭೂಮಿಯ ಒಡೆತನ ಹೊಂದಿದ್ದ ಯಹೂದ್ಯರಿಗೆ ಇಸ್ರೇಲ್ ಎಂಬ ದೇಶ ರಚಿಸಿಕೊಳ್ಳಲು 55% ಭೂಮಿಯನ್ನ ಕೊಡಲಾಯಿತು. 

1948ರ ಯುದ್ಧ:

ವಿಭಜನೆಯ ಬಳಿಕ ನಡೆದ ಈ ಯುದ್ಧದಲ್ಲಿ ಪ್ಯಾಲೆಸ್ಟೈನಿನ ಭೂಪಟವೇ ಬದಲಾಯಿತು. ಪಾಶ್ಚಿಮಾತ್ಯರ ಬೆಂಬಲದೊಂದಿಗೆ ಯುದ್ಧ ನಡೆಸಿದ ಇಸ್ರೇಲ್ ಏನಿಲ್ಲವೆಂದರೂ 30-40 ಮಾರಣಹೋಮಗಳನ್ನ ನಡೆಸಿತು. ಸಾವಿರಾರು ಪ್ರಜೆಗಳ ಸಾವಿನ ಬಳಿಕ ಸುಮಾರು ಏಳರಿಂದ ಎಂಟು ಲಕ್ಷ ಪಲೆಸ್ತೀನಿಯನ್ನರು ಅಲ್ಲಿಂದ ಒಕ್ಕಲೆದ್ದು ಇತರೆ ಅರಬ್ ರಾಷ್ಟ್ರಗಳೆಡೆ ಪ್ರಯಾಣ ಬೆಳೆಸಿದರು. 

ಲೆಬನಾನ್ ಕಡೆ ಪ್ರಯಾಣಿಸುತ್ತಿರುವ ನಿರಾಶ್ರಿತರು 
ಯುದ್ಧಕ್ಕೆ ಮೊದಲು 55% ಭೂಮಿಯ ಹಿಡಿತ ಹೊಂದಿದ್ದ ಇಸ್ರೇಲ್, ಯುದ್ಧದ ಬಳಿಕ 78% ಪ್ರದೇಶವನ್ನ ಕಬಳಿಸಿತ್ತು. ಐನೂರಕ್ಕೂ ಹೆಚ್ಚು ಹಳ್ಳಿ-ಪಟ್ಟಣಗಳು ನಿರ್ನಾಮವಾಗಿದ್ದವು! ಹೊಸ ಭೂಪಟವನ್ನ ರಚಿಸಿದ ಇಸ್ರೇಲ್ ಆನಂತರದ ಅದೆಷ್ಟೋ ವರ್ಷಗಳ ಕಾಲ ಪ್ಯಾಲೆಸ್ಟೈನ್ ಎಂಬ ದೇಶವೇ ಇರಲಿಲ್ಲ ಎಂದೇ ವಾದಿಸಿತು!!

1967ರ ಆರು ದಿನಗಳ ಯುದ್ಧ:

ಜೂನ್ 5, 1967 ರಿಂದ 10 ರವರೆಗೆ ಈ ಯುದ್ಧ ಇಸ್ರೇಲ್ ಮತ್ತು ಈಜಿಪ್ಟ್, ಸಿರಿಯಾ ಹಾಗೂ ಜೋರ್ಡನ್ ಗಳ ನಡುವೆ ನಡೆಯಿತು. ಕೇವಲ ಆರು ದಿನಗಳು ನಡೆದ ಈ ಕದನದಲ್ಲಿ ಇಸ್ರೇಲ್; ಸಿನಾಯಿ ದ್ವೀಪ ಹಾಗೂ ಗಾಜಾ ಪಟ್ಟಿಯನ್ನ ಈಜಿಪ್ಟಿನಿಂದ, ಪೂರ್ವ ಜೆರುಸಲೇಮ್ ಹಾಗೂ ವೆಸ್ಟ್ ಬ್ಯಾಂಕನ್ನ ಜೋರ್ಡನ್ನಿನಿಂದ ಹಾಗೂ ಗೋಲನ್ ಪ್ರಾಂತ್ಯವನ್ನ ಸಿರಿಯಾದಿಂದ ವಶಪಡಿಸಿಕೊಂಡಿತು. ಯುದ್ಧದಲ್ಲಿ ಇಸ್ರೇಲಿನ ಸೈನ್ಯದ ಸಾವಿರ-ಎರಡು ಸಾವಿರ ಸೈನಿಕರು ಹತರಾದರೆ; ಜೋರ್ಡನ್, ಸಿರಿಯಾ ಹಾಗೂ ಈಜಿಪ್ಟಿನ ಸೈನ್ಯಗಳು ಒಟ್ಟುಸೇರಿ ಮೂವತ್ತರಿಂದ ನಲವತ್ತು ಸಾವಿರ ಸೈನಿಕರನ್ನ ಕಳೆದುಕೊಂಡವು. 





















ಸಧ್ಯದ ಪರಿಸ್ಥಿತಿ:

  1. ಇಸ್ರೇಲಿನ ಜೈಲುಗಳಲ್ಲಿ ಅಂದಾಜು ಹತ್ತು ಸಾವಿರ ಪ್ಯಾಲೆಸ್ತಿನಿಯರನ್ನ ಖೈದಿಗಳಾಗಿ ಇರಿಸಲಾಗಿದೆ.
  2. ವೆಸ್ಟ್ ಬ್ಯಾಂಕ್ ಹಾಗೂ ಗಾಜಾ ಪಟ್ಟಿ ಈಗಲೂ ಇಸ್ರೇಲಿನ ಹಿಡಿತದಲ್ಲೇ ಇವೆ.
  3. ಸಿನಾಯಿ ಪ್ರಾಂತ್ಯವನ್ನ ಈಜಿಪ್ಟಿಗೆ ಹಿಂದಿರುಗಿಸಿಯಾಗಿದೆ.
  4. ಬೇರೆ ಯಾವುದೇ ದೇಶಕ್ಕೆ ಮಾಡುವುದಕ್ಕಿಂತ ಹೆಚ್ಚಿನ ಧನಸಹಾಯವನ್ನ ಅಮೇರಿಕ ಇಸ್ರೇಲಿಗೆ ಮಾಡುತ್ತದೆ (ದಿನಕ್ಕೆ 8 ದಶಲಕ್ಷ ಡಾಲರ್!)

ದುಡುಕು ಬುದ್ಧಿಯ ಪಾಶ್ಚಿಮಾತ್ಯರ "ಯುದ್ಧ ಪತ್ರಿಕೋದ್ಯಮ"

ಉಕ್ರೇನಿನ ಕ್ರೈಮಿಯಾ ಸ್ವಾಯತ್ತ ಪ್ರದೇಶಕ್ಕೆ ಹದಿನಾರು ಸಾವಿರ ಸೈನಿಕರನ್ನ ಕಳಿಸಿದ ರಷ್ಯಾ

ರಷ್ಯಾದ ಅತಿಕ್ರಮಣದಿಂದ ಉಲ್ಬಣಗೊಂಡ ಉಕ್ರೇನ್ ಬಿಕ್ಕಟ್ಟು

ಒಬಾಮ ಉಕ್ರೇನ್ ಬಿಕ್ಕಟ್ಟಿನ ಶಮನಕ್ಕೆ ಏನು ಮಾಡಬಲ್ಲರು


ಈ ರೀತಿಯ ಓತಪ್ರೋತ ಮುಖ್ಯಾಂಶಗಳನ್ನ ಪಾಶ್ಚಿಮಾತ್ಯ ಪತ್ರಿಕೋದ್ಯಮ, ಅಮೇರಿಕ ಮತ್ತಿತರ ಯುರೋಪಿಯನ್ ರಾಷ್ಟ್ರಗಳಲ್ಲಿ ತಮ್ಮ ಪತ್ರಿಕೆಗಳ ಮುಖಾಂತರ ಹಬ್ಬಿಸುತ್ತಿದ್ದರೆ ನಮ್ಮ ಭಾರತೀಯ ಪತ್ರಿಕೋದ್ಯಮ ಕೂಡ ಅದನ್ನ ಹಾಗೆಯೇ ಭಟ್ಟಿ ಇಳಿಸಿ ನಮಗೂ ಉಣಬಡಿಸಿತು! ಕ್ರೈಮಿಯಾ ಸ್ವಾಯತ್ತ ಪ್ರದೇಶ, 1997 ರ ಒಪ್ಪಂದ; ಮೊದಲಾದವುಗಳ ಬಗ್ಗೆ  ಸಂಶೋಧಿಸಿ ಬರೆಯುವ ತಾಳ್ಮೆ ಯಾವ ಪತ್ರಕರ್ತನಿಗೂ ಇದ್ದಂತಿರಲಿಲ್ಲ! ರಷ್ಯಾದ ಅಧಿಕಾರಿಗಳು ನಾವು ಯುದ್ಧ ಮಾಡ ಹೊರಟಿಲ್ಲ ಎಂದು ಅದೆಷ್ಟು ಬೊಬ್ಬಿಟ್ಟರೂ ಅವರನ್ನ ಕೇಳುವ ವ್ಯವಧಾನ ಯಾರೊಬ್ಬರಿಗೂ ಇರಲಿಲ್ಲ.
ಆದರೆ ಈಗ ನಿಜಾಂಶಗಳು ನಿಧಾನವಾಗಿಯಾದರೂ ಹೊರಬರುತ್ತಿವೆ.

ಭೂಪಟದಲ್ಲಿ ಕ್ರೀಮಿಯಾ



ಈ ಕೆಳಗಿನ ಅಂಶಗಳನ್ನ ಗಮನಿಸಿ:

1. ಕ್ರೈಮಿಯಾ ಸ್ವಾಯತ್ತ ಪ್ರದೇಶದಲ್ಲಿರುವ ಸೆವಸ್ತೊಪೋಲ್ ಎಂಬ ನಗರದಲ್ಲಿ 1783 ರಿಂದಲೂ ರಷ್ಯನ್ ನೌಕಾಪಡೆ ಬೀಡು ಬಿಟ್ಟಿದೆ. ಗ್ರಿಗೊರಿ ಪೊಟೆಂಕಿನ್ ಎಂಬ ರಷ್ಯಾದ ದೊರೆ ಸ್ಥಾಪಿಸಿದ ಈ ನಗರದಲ್ಲಿ ಈಗಲೂ ರಷ್ಯಾದ ಕಪ್ಪು ಸಮುದ್ರ ನೌಕಾಪಡೆ ಹಾಗೂ ಉಕ್ರೇನಿನ ನೌಕಾಪಡೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸುತ್ತವೆ. 1954 ರಲ್ಲಿ ನಿಕಿತಾ ಕ್ರುಶ್ಚೇವ್, ಉಕ್ರೇನಿಗೆ  ಕ್ರೈಮಿಯಾ ಪ್ರದೇಶವನ್ನು ಬಿಟ್ಟುಕೊಟ್ಟದ್ದು.
ರಷ್ಯಾ ಹಾಗೂ ಉಕ್ರೇನ್ ನೌಕಾಪಡೆಯ ಸೈನಿಕರು ಸೆವಸ್ತೊಪೋಲ್ ನಲ್ಲಿ ನೌಕಾದಿನದಂದು ಪಥಸಂಚಲನ ನಡೆಸುತ್ತಿರುವುದು.


2. ಸೋವಿಯತ್ ಒಕ್ಕೂಟ ಮುರಿದು ಬಿದ್ದ ಆರು ವರ್ಷಗಳ ನಂತರ, ಅಂದರೆ 1997ರಲ್ಲಿ ರಷ್ಯಾ ಹಾಗೂ ಉಕ್ರೇನ್ ಒಂದು ಒಪ್ಪಂದ ಮಾಡಿಕೊಂಡವು. ಆ ಒಪ್ಪಂದದ ಪ್ರಕಾರ  ಕ್ರೈಮಿಯಾ ಪ್ರದೇಶದಲ್ಲಿದ್ದ ತನ್ನ ನೌಕಾಪಡೆಯ 81% ಭಾಗವನ್ನ ರಷ್ಯಾ, 526.5 ದಶಲಕ್ಷ ಡಾಲರ್ ಕೊಟ್ಟು ಖರೀದಿ ಮಾಡಿತು.   

3. ಅದೇ ಒಪ್ಪಂದದ ಪ್ರಕಾರ ರಷ್ಯಾದ ನೌಕಾಪಡೆ 2017ರವರೆಗೂ  ಕ್ರೈಮಿಯಾದಲ್ಲಿರಬಹುದೆಂದು ನಿರ್ಧಾರವಾಗಿತ್ತು. 2010ರಲ್ಲಿ ಅದನ್ನ 2042ರವರೆಗೂ ವಿಸ್ತರಿಸಲಾಯಿತು.

4. ಉಕ್ರೇನ್ ದೇಶ ತನಗೆ ಮಾಡುತ್ತಿರುವ ಸಾಲ ಮರುಪಾವತಿಯಲ್ಲಿ ಪ್ರತೀ ವರ್ಷ 97.75 ದಶಲಕ್ಷ ಡಾಲರ್ ಹಣವನ್ನ ಮನ್ನಾ ಮಾಡುತ್ತಿರುವ ರಷ್ಯಾ ಅದಕ್ಕೆ ಬದಲಾಗಿ ಉಕ್ರೇನಿಗೆ ಸೇರಿದ ಕಪ್ಪು ಸಮುದ್ರದ ಪ್ರದೇಶದಲ್ಲಿ ತನ್ನ ನೌಕಾಪಡೆ ಓಡಾಡುವ ಹಕ್ಕು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ  ಕ್ರೈಮಿಯಾ ಪ್ರದೇಶದಲ್ಲಿ 25,000 ಸೈನಿಕರನ್ನ ಇರಿಸುವ ಹಕ್ಕನ್ನ ಕೂಡ ಹೊಂದಿದೆ. (ಸಧ್ಯ ಅಲ್ಲಿ ಬೀಡು ಬಿಟ್ಟಿರುವ ಸೇನೆಯ ಸಂಖ್ಯೆ ಅಂದಾಜು 15 ರಿಂದ 16 ಸಾವಿರ)

ಕ್ರೈಮಿಯಾ ಸ್ವಾಯತ್ತ ಪ್ರದೇಶ ಭಾವನಾತ್ಮಕವಾಗಿ ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳಿಗೂ ಬಹಳ ಸೂಕ್ಷ್ಮ ಪ್ರದೇಶ. ಸುಮಾರು 20 ಲಕ್ಷ ಜನಸಂಖ್ಯೆ ಇರುವ ಈ ಭೂಪ್ರದೇಶದಲ್ಲಿ 60% ರಷ್ಯನ್ನರೇ ಇರುವ ಕಾರಣ (25% ಉಕ್ರೇನಿಯನ್ನರಾದರೆ ಉಳಿದ 15% ಕ್ರೀಮಿಯನ್ನರು) ; ರಷ್ಯಾ ಸರ್ಕಾರ ಸ್ವಾಭಾವಿಕವಾಗಿಯೇ ಇದರ ಮೇಲೆ ಒಂದು ಹದ್ದಿನ ಕಣ್ಣಿಟ್ಟಿರುತ್ತದೆ.

ಇತ್ತೀಚಿಗಷ್ಟೇ ಪತನಗೊಂಡ ಉಕ್ರೇನ್ ಸರ್ಕಾರದ ಜಾಗದಲ್ಲಿ ಎದ್ದು ನಿಂತಿರುವ ಹೊಸ ಸರ್ಕಾರ, ಈ ಸ್ವಾಯತ್ತ ಪ್ರದೇಶವೂ ಸೇರಿದಂತೆ, ಉಕ್ರೇನಿನೆಲ್ಲೆಡೆ ಉಕ್ರೇನಿಯನ್ ಬಿಟ್ಟರೆ ಬೇರಾವ ಭಾಷೆಯನ್ನೂ ಅಧಿಕೃತವಾಗಿ ಬಳಸುವಂತಿಲ್ಲ ಎಂಬ ಆದೇಶ ಹೊರಡಿಸಿದೆ. ಇದರಿಂದ ಕುಪಿತಗೊಂಡಿರುವ ರಷ್ಯಾದ ಸಂಯುಕ್ತ ಮಂತ್ರಾಲಯ ಅದಾಗಲೇ, ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಪಡೆಯನ್ನ  ಕ್ರೈಮಿಯಾಗೆ ಕಳಿಸಲು ಒಪ್ಪಿಗೆ ನೀಡಿದೆ. ಪುಟಿನ್ ಈ ನಿಟ್ಟಿನಲ್ಲಿ ಹೇಗೆ ಮುಂದುವರೆಯುತ್ತಾರೆ ಎಂಬುದನ್ನ ಮಾತ್ರ ಕಾದು ನೋಡಬೇಕಿದೆ.

ಭಾಷೆಯ ವಿಚಾರದಲ್ಲಿ ನಡೆದ ಸ್ವಾತಂತ್ರ ಸಂಗ್ರಾಮವೊಂದು ನಮ್ಮ ಪಕ್ಕದ ಮನೆಯಂತಿರುವ ಬಾಂಗ್ಲಾದಲ್ಲೇ ಹಿಂದೆ ನಡೆದಿದ್ದನ್ನ ನಾವು ಕಂಡಿದ್ದೇವೆ. ಆ ರಕ್ತಸಿಕ್ತ ಸಂಗ್ರಾಮದಲ್ಲಿ ಲಕ್ಷಾಂತರ ಮಂದಿ ಹತರಾಗಿದ್ದರು. ಅಕಸ್ಮಾತ್ ಕ್ರೈಮಿಯಾದಲ್ಲೇನಾದರೂ ಸಂಗ್ರಾಮ ನಡೆದರೂ ಅದು ಹಿಂಸಾತ್ಮಕವಾಗಿರದಿರಲಿ ಎಂದು ಆಶಿಸೋಣ.